ಮುಳಗುಂದ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ವ್ಯಾಪ್ತಿಯಲ್ಲಿ ಕಳೆದ ನಾಲ್ಕು ದಿನಗಳ ಹಿಂದೆ ಉತ್ತಮ ಮಳೆಯಾಗಿದ್ದು, ಕೋವಿಡ್ ಲಾಕ್ ಡೌನ್ ಮಧ್ಯೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಮುಂಗಾರು ಹಂಗಾಮಿನ ಪ್ರಮುಖವಾಗಿ ಹೆಸರು, ಶೇಂಗಾ, ಹತ್ತಿ, ಗೋವಿನ ಜೋಳ ಬಿತ್ತನೆಗೆ ರೈತರು ಭೂಮಿ ಹದಗೊಳಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.
ಕಳೆದ ವರ್ಷ ಬೆಳೆದ ಫಸಲು ಕೈಸೇರುವ ಮುನ್ನ ಅತೀವೃಷ್ಟಿಯಾಗಿ ರೈತರು ನಷ್ಟ ಅನುಭವಿಸಿದ್ದರು. ಸಧ್ಯ ಮುಂಗಾರು ಪೂರ್ವದ ಮಳೆ ಉತ್ತಮವಾಗಿದೆ. ಹೊಲದಲ್ಲಿನ ಕಳೆ ತೆಗೆದು ಸ್ವಚ್ಛ ಮಾಡುವ ಕಾರ್ಯ, ಕೆಲವು ಭಾಗದಲ್ಲಿ ಹೆಸರು, ಹತ್ತಿ ಬಿತ್ತನೆ ಕಾರ್ಯವು ನಡೆದಿರುವದು ಎಲ್ಲಡೆ ಕಂಡುಬರುತ್ತಿದೆ.
ಪ್ರಸಕ್ತ ವರ್ಷ ಕೃಷಿ ಇಲಾಖೆವು ಗದಗ ತಾಲೂಕಿನ ವ್ಯಾಪ್ತಿಯಲ್ಲಿ 67200 ಹೆಕ್ಟರ್ ಭೂ ಪ್ರದೇಶಲ್ಲಿ ಮುಂಗಾರ ಬಿತ್ತನೆ ಗುರಿ ಹೊಂದಿದೆ. ಇದರಲ್ಲಿ 29500 ಹೆಕ್ಟರ್ ಹೆಸರು, 12500 ಹೆಕ್ಟರ್ ಶೇಂಗಾ, 10500 ಹೆಕ್ಟರ್ ಗೋವಿನಜೋಳ, 100 ಹೆಕ್ಟರ್ ಹೈಬಿರ್ಡ ಜೋಳ, 8500 ಹೆಕ್ಟರ್ ಹತ್ತಿ , 1000 ಹೆಕ್ಟರ್ ಸೂರ್ಯಕಾಂತಿ ಬಿತ್ತನೆ ಕ್ಷೇತ್ರವಾಗಿದೆ. ಮೇ 27 ರ ತನಕ 200 ಟನ್ ಯೂರಿಯಾ, 140 ಟನ್ ಡಿಎಪಿ, 60 ಟನ್ ಎಂಒಪಿ, 700 ಟನ್ ಕಾಂಪ್ಲೆಕ್ಸ ರಾಸಾಯನಿಕ ಗೊಬ್ಬರ ಸಂಗ್ರಹವಿದೆ. ಎಂದು ಸಹಾಯಕ ಕೃಷಿ ನಿರ್ದೇಶಕ ರವಿ ತಿಳಿಸಿದರು.
ಪ್ರಸಕ್ತ ವರ್ಷ ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಕೃಷಿ ಚಟುವಟಿಕೆಗೆ ಹಲವು ಅಡ್ಡಿ ಆತಂಕಗಳು ಎದುರಾಗುತ್ತಿವೆ. ಕೋವಿಡ್ ಕಾರಣದಿಂದ ಸಹಕಾರಿ ವ್ಯವಸಾಯ, ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಅಗತ್ಯ ಸಮಯಕ್ಕೆ ಹಣ ದೊರಕುತ್ತಿಲ್ಲ, ಭೂಮಿ ಉಳುಮೆಗೆ ಟ್ರ್ಯಾಕ್ಟರ್ ರಿಪೇರಿ ಅಡ್ಡಿಯಾಗುತ್ತಿದೆ. ಇನ್ನೂ ಕೈ ಸಾಲವಂತೂ ಯಾರೂ ನೀಡದ ಸ್ಥಿತಿ ಉದ್ಭವಿಸಿದೆ. ಬೈಕನಲ್ಲಿ ಹೊಲಕ್ಕೆ ಹೋಗವ ರೈತ ಕಾರ್ಮಿಕರಿಗೆ ಪೊಲೀಸರಿಂದ ಬೈಕ್ ಸೀಜ್ ಮಾಡುವ ಭಯ ಕಾಡುತ್ತಿದೆ. ಕೃಷಿಕರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ವ್ಯವಸ್ಥೆ ಮಾಡಬೇಕು ಎಂದು ರೈತ ಮುದುಕಪ್ಪ ಆಗ್ರಹಿಸಿದರು.
ಗದಗ ತಾಲೂಕಿನ ಹುಲಕೋಟಿ ರೈತ ಸಂಪರ್ಕ ಕೇಂದ್ರ ಸೇರಿದಂತೆ ಮುಳಗುಂದ ಮತ್ತು ಸೊರಟೂರ ನಲ್ಲಿ ಕೃಷಿ ಇಲಾಖೆಯ ರಿಯಾಯತಿ ದರದ ಬೀಜ, ರಾಸಾಯನಿಕ ಗೊಬ್ಬರ ಕೋವಿಡ್ ನಿಯಮ ಅನ್ವಯ ವಿತರಣೆ ಆರಂಭವಾಗಿದೆ. ರೈತರು ಬೆಳಿಗ್ಗೆ 6 ರಿಂದ 10 ಗಂಟೆ ವರೆಗೂ ತೆಗೆದುಕೊಳ್ಳಬೇಕು.
- ಪಿ.ರವಿ, ಸಹಾಯಕ ಕೃಷಿ ನಿರ್ದೇಶಕ ಗದಗ ತಾಲೂಕ.