ಆಲಮಟ್ಟಿ: ಈ ಭಾಗದ ಪ್ರವಾಸಿ ತಾಣವಾಗಿ ಖ್ಯಾತಿ ಪಡೆಯುತ್ತಿರುವ ಆಲಮಟ್ಟಿಯನ್ನು ಇನ್ನಷ್ಟು ಪ್ರವಾಸಿಗರನ್ನು ಇತ್ತ ಆಕಷಿ೯ಸಿ ಸೆಳೆಯಲು ಹಲ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ.ಈ ಹಸಿರು ಪರಿಸರದ ನೆಲವನ್ನು ಪ್ರವಾಸಿ ತಾಣವನ್ನಾಗಿ ಮತ್ತಿಷ್ಟು ಉತ್ಕಟ ಮಟ್ಟದಲ್ಲಿ ಪ್ರಖ್ಯಾತಿ ಪಡೆಯಲು ಯತ್ನಿಸಲಾಗುತ್ತಿದೆ ಎಂದು ಮುಖ್ಯ ಎಂಜಿನಿಯರ್ ಎಚ್.ಸುರೇಶ್ ಹೇಳಿದರು.
ಬುಧವಾರ ಸ್ಥಳೀಯ ಶಾಸಕರ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿ 73 ನೇ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಈ ಪ್ರವಾಸಿ ತಾಣ ಅಭಿವೃದ್ಧಿ ಪಥದತ್ ಕೊಂಡೊಯ್ಯಲು ಮಹತ್ತರ ಕ್ರಾಂತಿಗೆ ಇಲ್ಲಿ ಚಾಲನೆ ನೀಡಲಾಗಿದೆ. ಆಲಮಟ್ಟಿಯನ್ನು ಸುಂದರ ರಮಣೀಯ ಸ್ಥಳವಾಗಿ ರೂಪಿಸಲು ಕೆಬಿಜೆಎನ್ ಎಲ್ ನಾನಾ ಉದ್ಯಾನ, ಜಲಕ್ರೀಡೆಗಳು, 7 ಡಿ ಯಂತಹ ಥ್ರಿಲ್ಲರ್ ಥೇಟರ್ ನಿರ್ಮಿಸುತ್ತಿದೆ ಎಂದು ಮುಖ್ಯ ಎಂಜಿನಿಯರ್ ಎಚ್. ಸುರೇಶ ತಿಳಿಸಿದರು.
ಇದರಿಂದ ಸ್ಥಳೀಯರಿಗೆ ಪೂರಕ ಉದ್ಯೋಗಗಳು ಪ್ರಫುಲವಾಗಿ ದೊರೆಯುತ್ತವೆ ಎಂದ ಅವರು, ಈ ಪ್ರವಾಸಿ ತಾಣಕ್ಕೆ ಅನನ್ಯ ರೂಪ ಸ್ಪಶಿ೯ಸಿ ಮೇಲ್ದರ್ಜೆಗೇರಿಸಲು ನಾನಾ ಬಗೆಯ ಕಾಮಗಾರಿ ಕೈಗೊಳ್ಳುವುದರ ಜೊತೆಗೆ ಪ್ರವಾಸಿಗರಿಗೆ ಮೂಲ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಪ್ರಜಾಸತ್ತಾತ್ಮಕ ಮೌಲ್ಯ ಪ್ರತಿಪಾದಿಸುವ ಗಣರಾಜ್ಯೋತ್ಸವ ನಮ್ಮೆಲ್ಲರ ಸ್ವಾಭಿಮಾನದ ಪ್ರತೀಕ. ರಾಷ್ಟ್ರ ನಾಯಕರ,ಸ್ವಾತಂತ್ರ್ಯ ಸೇನಾನಿಗಳ ಸೇವಾಭಾವ,ತ್ಯಾಗ,ಬಲಿದಾನ ಎಂದೂ ಮರೆಯಲಾಗದು. ಕರೋನಾ ಸಂಕಷ್ಟದಲ್ಲೂ ಗಣರಾಜ್ಯ ವೈಭವ ಸರಳತೆಯಿಂದ ಅಭಿಮಾನಪೂರ್ವಕವಾಗಿ ಸಾಗಿದ್ದು ಸಂತಸ ಎಂದರು.
ಸೂಪರಿಂಟೆಂಡೆಂಟ್ ಎಂಜಿನಿಯರ್ ಡಿ.ಬಸವರಾಜ ಮಾತನಾಡಿ, ಆಲಮಟ್ಟಿ ಶಾಸಕರ ಮಾದರಿ ಶಾಲೆಯ ಮೈದಾನ ವನ್ನು ಕ್ರೀಡಾಂಗಣವನ್ನಾಗಿ ಉನ್ನತೀಕರಿಸಲಾಗುವುದು, ಸಿಂಥೆಟಿಕ್ ಟ್ರ್ಯಾಕ್ ನಿರ್ಮಿಸಲಾಗುವುದು ಎಂದರು.
ನೌಕರರ ಸಂಘದ ಅಧ್ಯಕ್ಷ ಸದಾಶಿವ ದಳವಾಯಿ, ಬವರಾಜ ಬನ್ನೂರ, ಬಿ.ಎಚ್. ಕೋಲಕಾರ, ಬಾಣಕಾರ, ಬಿ.ಎಸ್. ಯರವಿನತೆಲಿಮಠ ಇನ್ನೀತರರು ಇದ್ದರು.
ನಾನಾ ಕಡೆ ಗಣರಾಜ್ಯ ದಿನ : ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಸ್ ಡಿಎಂಸಿ ಅಧ್ಯಕ್ಷ ನಿಸ್ಸಾರ್ ನದಾಫ್, ನೌಕರರ ಸಂಘದ ಕಾರ್ಯಾಲಯದಲ್ಲಿ ಸದಾಶಿವ ದಳವಾಯಿ, ಮುಖ್ಯ ಎಂಜಿನಿಯರ್ ಹಾಗೂ ಎಂಡಿ ಕಚೇರಿಯಲ್ಲಿ ಎಚ್. ಸುರೇಶ, ಆರ್ ಬಿ ಪಿ.ಜಿ.ಹಳಕಟ್ಟಿ ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ ಧ್ವಜಾರೋಹಣ ನೆರವೇರಿಸಿದರು.